ಹಾಸ್ಯ-ನೃತ್ಯ "ಸಂಗಮ"

ನೃತ್ಯ ಸೊಬಗಿನ ಹರಿವಿನ ಜೊತೆಗೆ ಹಾಸ್ಯದ ಪ್ರವಾವಹವೂ ಒಂದಾಗುವ ಅಪೂರ್ವ "ಸಂಗಮ" ಸ್ಥಾನ! ಹೌದು; ಗರುಡ ನಾಟ್ಯ ಸಂಘ ಇಂಥದೊಂದು ರಸದೌತಣವನ್ನು ಕಲಾಪ್ರಿಯ ಸಹೃದಯರಿಗೆ ಉಣಬಡಿಸಲಿದೆ.

ಶ್ರೀ ಸಾಯಿ ಗೋಲ್ಡ್ ಪ್ಯಾಲೆಸ್ ಸಹಯೋಗದೊಂದಿಗೆ ಇದೇ ಭಾನುವಾರ (24ನೇ ಜನವರಿ, 2010) ಸಂಜೆ 6.30ಕ್ಕೆ ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಡ್ಲ್ ಕಲ್ಚರ್ ಸಭಾಂಗಣದಲ್ಲಿ ಗರುಡ ನಾಟ್ಯ ಸಂಘದ ಕಲಾವಿದರು ನೃತ್ಯದ ಸುಂದರ ಹಂದರದ ನಡುವೆ ತತ್ವ ಸಾರಕ್ಕೆ ಅಲಂಕಾರ ರತ್ನ ಕಿರೀಟ ತೊಡಿಸುವರು.

ಗೆಜ್ಜೆ ಕಟ್ಟಿ ಹೆಜ್ಜೆ ಹಾಕು ಕಲಾವಿದರು "ಪರಭ್ರಹ್ಮ ಒಂದೇ" ಎನ್ನುವ ಸಂದೇಶವನ್ನೂ ಸಾರುವರು. ಅಷ್ಟೇ ಅಲ್ಲ ಅದೇ ವೇದಿಕೆಯಲ್ಲಿ "ಹ್ಯೂಮರ್ ಕಿಂಗ್" ವೈ.ಎಂ.ಎನ್. ಮೂರ್ತಿ ಅವರು ಜೀವನದಲ್ಲಿ ಪಾಲಿಸಬೇಕಾದ ಸತ್ವಯುತವಾದ ತತ್ವಗಳನ್ನು ಹಾಸ್ಯದ ಸಿಹಿಲೇಪದೊಂದಿಗೆ ಪ್ರೇಕ್ಷಕರಿಗೆ ಹಂಚುವರು. ಆದ್ದರಿಂದಲೇ ಇದು ಅರ್ಥಪೂರ್ಣವಾದ ಹಾಸ್ಯ-ನೃತ್ಯ ಸಂಗಮ ಸ್ಥಾನ.

ಟೆಲಿವಿಷನ್ ನಟಿ ಶೋಭಾ ಲೋಲನಾಥ್ ಮತ್ತು ಭರತನಾಟ್ಯ ಪಟು ಎಸ್. ರಘುನಂದನ್ ನೇತೃತ್ವದಲ್ಲಿ ಯುವ ಕಲಾವಿದರು ಕ್ಲಾಸಿಕಲ್ ಹಾಗೂ ಸಮಕಾಲೀನ ನೃತ್ಯವನ್ನು ವಿಭಿನ್ನವಾದ ರೀತಿಯಲ್ಲಿ ರಂಗವೆನ್ನುವ ಕ್ಯಾನ್ವಾಸ್ ಮೇಲೆ ರಂಗುಗಳ ಚಿತ್ತಾರವಾಗಿ ಬಿಡಿಸಿಡುವುದನ್ನು ನೋಡುವುದೇ ಕಣ್ಣಿಗೆ ಸೊಗಸು. ಭಕ್ತಿಯ ಜೊತೆಗೆ ತತ್ವವನ್ನು ಬೆರೆಸಿದ ವಿಶಿಷ್ಟವಾದ ನಾಟ್ಯಕಲಾ ಪ್ರದರ್ಶನವಿದು.

ಇಂಥದೊಂದು ಹಾಸ್ಯ ಮತ್ತು ನೃತ್ಯದ "ಸಂಗಮ" ಕಾರ್ಯಕ್ರಮಕ್ಕೆ ಕಳೆಕಟ್ಟಲು ಟೆಲಿವಿಷನ್ ಧಾರಾವಾಹಿಗಳ ನಿರ್ದೇಶಕ ಹಾಗೂ ನಿರ್ಮಾಪಕರಾದ ರವಿ ಕಿರಣ್, ಸಮಾಜ ಸೇವಕ ಕಿಶೋರ್ ಕುಮಾರ್ ಹಾಗೂ ಆರ್.ಎಂ.ಎಸ್. ಇಂಟರ್ ನ್ಯಾಷನಲ್ ಶಾಲೆ ಕಾರ್ಯದರ್ಶಿಗಳಾದ ರತ್ನಾ ಎಂ. ಶ್ರೀನಿವಾಸ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು.

ತಾರಾಕುಮಾರಿ ಎಂ.ಎಲ್, ನವೀನ್ ಕುಮಾರ್, ನಿಧಿ ಶ್ರೀನಾಥ್, ರಮ್ಯಾ ವೆಂಕಟೇಶ್, ಯೋಗಿತಾ ಎಲ್.ಎಂ., ಸಂಧ್ಯಾ ದಿನೇಶ್, ಅನಘಾ ಭಟ್, ವರ್ಷಾ ವೆಂಕಟೇಶ್, ಗಿರೀಶ್ ಭಟ್ ಹಾಗೂ ಕಾರ್ತಿಕ್ ಗಿರೀಶ್ ಶರ್ಮ ಅವರು ನೃತ್ಯ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿರುವ ಯುವ ಕಲಾವಿದರು.