ಏಕತೆಯ ಸಂದೇಶ ಸಾರಿದ "ಸಂಗಮ"

ಭುವಿಯಲ್ಲಿ ಜನಿಸಿದ ಎಲ್ಲರೂ ನಡೆಯುವ ಭೂಮಿ, ಕುಡಿಯುವ ನೀರು...ಎಲ್ಲವೂ ಒಂದೇ; ಆದರೆ ನಮ್ಮಲ್ಲಿ ಜಾತಿ, ಧರ್ಮ ಹಾಗೂ ವರ್ಣ ಬೇಧ ಏಕೆ ಎಂದು ಯೋಚಿಸುವಂತೆ ಮಾಡಿದರು ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ನಲಿದ ನಾಟ್ಯ ಕಲಾವಿದೆಯರು. ಆಂಧ್ರ ಮಹಾಕವಿ ಅನ್ನಮಯ್ಯ ಬರೆದ ಕಾವ್ಯದ ನಾಲ್ಕು ಸಾಲುಗಳನ್ನು ಗರುಡ ನಾಟ್ಯ ಸಂಘದ ಪುಟ್ಟ ಹಾಗೂ ಯುವ ಕಲಾವಿದರು ಅರ್ಥಪೂರ್ಣವಾಗಿ ರಂಗದ ಮೇಲೆ ಪ್ರದರ್ಶಿಸಿದ್ದು ವಿಶೇಷ.

ಒಂದೆಡೆ ನೃತ್ಯದ ಮೂಲಕ ಸಾಮಾಜಿಕ ಕಳಕಳಿಯ ಸಂದೇಶವನ್ನು ಸಾರಿದರೆ; ಇನ್ನೊಂದೆಡೆ ಅದೇ ವೇದಿಕೆಯಲ್ಲಿ "ಹ್ಯೂಮರ್ ಕಿಂಗ್" ವೈ.ಎಂ.ಎನ್. ಮೂರ್ತಿ ಅವರು ಜೀವನದಲ್ಲಿ ಸರ್ವರೂ ಪಾಲಿಸಬೇಕಾದ ಸತ್ವಯುತವಾದ ತತ್ವಗಳನ್ನು ಹಾಸ್ಯದ ಸಿಹಿಲೇಪದೊಂದಿಗೆ ಪ್ರೇಕ್ಷಕರಿಗೆ ಹಂಚಿದರು. ಆದ್ದರಿಂದ ಅಂದು ಸಂಜೆ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಡ್ಲ್ ಕಲ್ಚರ್ ಭವನದಲ್ಲಿ ಸೇರಿದ್ದವರ ಮನಕ್ಕೆ ರಂಜನೆಯ ಹಿತದೊಂದಿಗೆ ಒಂದಾಗಿ ಬಾಳುವ ಸಂದೇಶವೂ ತಂಗಾಳಿಯಾಗಿ ಸೋಕಿತು.

ಆದ್ದರಿಂದಲೇ ಅದೊಂದು ನೃತ್ಯ ಸೊಬಗಿನ ಹರಿವಿನ ಜೊತೆಗೆ ಹಾಸ್ಯದ ಪ್ರವಾವಹವೂ ಒಂದಾದ ಅಪೂರ್ವವಾದ ಹಾಗೂ ಅರ್ಥಪೂರ್ಣವಾದ "ಸಂಗಮ" ಸ್ಥಾನವೆನಿಸಿತು. "ಪರಭ್ರಹ್ಮ ಒಂದೇ" ಎನ್ನುವ ಸಂದೇಶವು ಗೆಜ್ಜೆಗಳ ಸದ್ದಿನೊಂದಿಗೆ ನೃತ್ಯ ಪ್ರಿಯರ ಎದೆಯೊಳಗೆ ನಿನಾದ ಮಾಡಿತು.

ಕಿರುತೆರೆ ಕಲಾವಿದೆ ಶೋಭಾ ಲೋಲನಾಥ್ ಮತ್ತು ಉತ್ಸಾಹಿ ಭರತನಾಟ್ಯ ಪಟು ಎಸ್.ರಘುನಂದನ್ ನೇತೃತ್ವದಲ್ಲಿ ಯುವ ಕಲಾವಿದರು ಕ್ಲಾಸಿಕಲ್ ಹಾಗೂ ಸಮಕಾಲೀನ ನೃತ್ಯವನ್ನು ವಿಭಿನ್ನವಾದ ರೀತಿಯಲ್ಲಿ ರಂಗವೆನ್ನುವ ಕ್ಯಾನ್ವಸ್ ಮೇಲೆ ರಂಗುಗಳ ಚಿತ್ತಾರವಾಗಿ ಬಿಡಿಸಿಟ್ಟರು. ಭಕ್ತಿಯ ಜೊತೆಗೆ ತತ್ವವೂ ಬೆರೆತಿದ್ದರಿಂದ ಸಂಪ್ರದಾಯದ ಚೌಕಟ್ಟಿನೊಳಗೆ ವೈಚಾರಿಕ ಅಂಶಗಳು ಬಿಂಬಿತವಾದವು.

ತಾರಾಕುಮಾರಿ ಎಂ.ಎಲ್, ನವೀನ್ ಕುಮಾರ್, ನಿಧಿ ಶ್ರೀನಾಥ್, ರಮ್ಯಾ ವೆಂಕಟೇಶ್, ಯೋಗಿತಾ ಎಲ್.ಎಂ., ಸಂಧ್ಯಾ ದಿನೇಶ್, ಅನಘಾ ಭಟ್, ವರ್ಷಾ ವೆಂಕಟೇಶ್, ಗಿರೀಶ್ ಭಟ್ ಹಾಗೂ ಕಾರ್ತಿಕ್ ಗಿರೀಶ್ ಶರ್ಮ ಅವರು ಪ್ರತಿಭಾಪೂರ್ಣವಾದ ನೃತ್ಯಾಭಿನಯದಿಂದ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿದರು.

ಇನ್ನೊಂದು ವಿಶೇಷವೆಂದರೆ ಇದೇ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರಳಾದ ಪುಟ್ಟ ಕಲಾವಿದೆ ವರ್ಷಾ ವೆಂಕಟೇಶ್ಗೆ ಸಹೃದಯಿಯಾದ ಕಿಶೋರ್ ಕುಮಾರ್ ಅವರು ಹದಿನೈದು ಸಾವಿರ ರೂಪಾಯಿ ಶಿಕ್ಷಣ ಪ್ರೋತ್ಸಾಹ ಧನವಾಗಿ ನೀಡಿದರು. ಶ್ರೀ ಸಾಯಿ ಗೋಲ್ಡ್ ಪ್ಯಾಲೆಸ್ ಸಹಯೋಗದಲ್ಲಿ ನಡೆದ "ಸಂಗಮ" ಕಾರ್ಯಕ್ರಮಕ್ಕೆ ಕಳೆಕಟ್ಟಿದ ಕಿರುತೆರೆ ನಿರ್ದೇಶಕ ಹಾಗೂ ನಿರ್ಮಾಪಕ ರವಿ ಕಿರಣ್, ಸಾಯಿ ಗೋಲ್ಡ್ ಪ್ಯಾಲೆಸ್ ಒಡೆಯರಾದ ಸರವಣ ಹಾಗೂ ಆರ್.ಎಂ.ಎಸ್. ಇಂಟರ್ ನ್ಯಾಷನಲ್ ಶಾಲೆ ಕಾರ್ಯದರ್ಶಿಗಳಾದ ರತ್ನಾ ಎಂ. ಶ್ರೀನಿವಾಸ್ ಕೂಡ ಕಲಾವಿದವೃಂದಕ್ಕೆ ಮುತ್ತಿನಂಥ ಮಾತುಗಳ ಹಾರ ತೊಡಿಸಿದರು.