ರಾಜಕೀಯ ಪರಿಸ್ಥಿತಿಯ ಬಿಂಬವಾದ ಗೊಂಬೆ

ಸಿಂಗರಿಸಿಕೊಂಡ "ಮೋಟು" ಕತ್ತೆ ಗೆಜ್ಜೆ ಸದ್ದಿನೊಂದಿಗೆ ಹೆಜ್ಜೆ ಹಾಕುತ್ತಾ ಬಂದಾಗ ಕಿರಿಯರು ಮಾತ್ರವಲ್ಲ ಹಿರಿಯರೂ ಮನದುಂಬಿ ನಕ್ಕರು.

ಮುದ್ದಿನ ಕತ್ತೆಯ ಮುಗ್ಧ ಯಜಮಾನ ಮೋಸಹೋಗುವ ರೀತಿಯನ್ನು ಕೂಡ ಕಂಡ ಅದೇ ಪ್ರೇಕ್ಷಕರು ಮರುಗಿದರು. ಮೋಸದ ಮಾತಿನ ಮೋಡಿಗಾರನ ಕಡೆಗೆ ನೋಡಿ ಯೋಚನೆ ಕೂಡ ಮಾಡಿದರು. ಇದೆಲ್ಲೋ ನಮ್ಮದೇ ಕಥೆ ಎನ್ನುವ ಚಿಂತನ ಮಂಥನವೂ ಜನರ ಮನದೊಳಗೆ ಮೊಳಕೆಯೊಡೆಯಿತು.

ಮೋಸ ಮಾಡುವ ರಾಜಕಾರಣಿಗಳು ಹೇಗೆ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಾರೆ ಎನ್ನುವ ವ್ಯಂಗ್ಯದೊಂದಿಗೆ "ಗಾರ್ದಭ ಮನುಷ್ಯ" ಗೊಂಬೆ ಆಟ ಕೊನೆಗೊಂಡಾಗ ಪ್ರೇಕ್ಷಕರ ಒಳನೋಟದಲ್ಲಿಯೂ ಯೋಚನೆಗಳ ಸುಳಿದಾಟ! ಹೌದು; ಚಿಂತನೆಗೆ ಅವಕಾಶ ನೀಡುವಂಥ ಗಂಭೀರವಾದ ವಿಷಯವನ್ನು ಹಾಸ್ಯದ ಸಿಹಿ ಲೇಪದೊಂದಿಗೆ ನೋಡುಗರ ಮುಂದೆ ತೆರೆದಿಟ್ಟರು "ಗೊಂಬೆ ಮನೆ" ಕಲಾವಿದರು.

ಗರುಡ ನಾಟ್ಯ ಸಂಘವು ಆಯೋಜಿಸಿದ್ದ ಗಾರ್ದಭ ಮನುಷ್ಯ ಗೊಂಬೆ ಆಟವು ಇಂದಿನ ರಾಜಕೀಯ ಪರಿಸ್ಥಿತಿಯನ್ನು ವಿಭಿನ್ನವಾದ ರೀತಿಯಲ್ಲಿ ವಿಡಂಬನಾತ್ಮಕವಾಗಿ ವಿವರಿಸಿದ್ದು ವಿಶೇಷ.

ಸಂತಾನ ಭಾಗ್ಯವಿಲ್ಲದ ಅಗಸನು ತನ್ನ ಕತ್ತೆಯನ್ನು ಮನುಷ್ಯನನ್ನಾಗಿ ಪರಿವರ್ತಿಸಿಕೊಂಡು, ಮಗನನ್ನಾಗಿಯೂ ಮಾಡಿಕೊಂಡು ಸಾಕುವ ಆಸೆಯಲ್ಲಿ ಮೋಸ ಹೋಗುವುದೇ ಈ ಗೊಂಬೆ ಪ್ರಹಸನದ ಸಾರ.

ಮಧ್ಯ ಏಷ್ಯಾದ ಜನಪದ ಕಥೆಯನ್ನು ನಟರಾಜ್ ಹೊನ್ನವಳ್ಳಿ ಅವರು ವಿಶಿಷ್ಟವಾದ ರೀತಿಯಲ್ಲಿ ಗೊಂಬೆ ಆಟಕ್ಕೆ ಹೊಂದುವಂತೆ ರಂಗರೂಪಕ್ಕೆ ಇಳಿಸಿದ್ದಾರೆ. ಸಮಕಾಲೀನ ಸ್ಥಿತಿಗೆ ಒಪ್ಪುವ ರೀತಿಯಲ್ಲಿ ಅದನ್ನು ಗೊಂಬೆ ಆಟವಾಗಿಸಿದ ಶ್ರೇಯ ಡಾ.ಪ್ರಕಾಶ್ ಗರುಡ ಅವರದ್ದು. ಅಜಿತ್ ರಾವ್ ಅವರು ಮೊಗಲ್ ಕಲಾ ಶೈಲಿಯನ್ನು ಗೊಂಬೆಗಳ ವಿನ್ಯಾಸಕ್ಕೆ ಅಳವಡಿಸಿದ್ದರೂ, ಕಾರ್ಟೂನ್ ಗಳ ರೀತಿಯಲ್ಲಿ ಮನಕ್ಕೆ ಮುದ ನೀಡುವಂಥ ಮುಖಭಾವ ನೀಡಿದ್ದು ನೋಡಲು ಆಕರ್ಷಕ.

"ಗಾರ್ದಭ ಮನುಷ್ಯ" ಪ್ರದರ್ಶನದ ಜೀವಾಳ ಮಾತ್ರ ನಾಗರಾಜ್ ಹೆಗಡೆ ಅವರ ಸಂಗೀತ ಸಂಯೋಜನೆ. ಜೊತೆಗೆ ಗೊಂಬೆ ಆಡಿಸುವ ಕಲಾವಿದರಾದ ರವಿ, ಧನಂಜಯ, ಲಿಂಗರಾಜ, ದೀಪಾ ಹಾಗೂ ವಸಂತಾ ಅವರ ಕೌಶಲ್ಯ ಮತ್ತು ಪ್ರೇಕ್ಷಕರನ್ನು ಹಿಡಿದಿಡುವಂಥ ಧ್ವನಿ ಏರಿಳಿತವು ಮೆಚ್ಚುಗೆಗೆ ಅರ್ಹ. ಗಂಭೀರವಾದ ಕಥೆಯನ್ನು ಸುಲಭವಾಗಿ ನೋಡುಗರ ಮನದಾಳಕ್ಕೆ ಇಳಿಸುವಲ್ಲಿ ಈ ಎಲ್ಲ ಅಂಶಗಳು ಬೆಂಗಳೂರಿನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನಡೆದ "ಗಾರ್ದಭ ಮನುಷ್ಯ" ಪ್ರಹಸನಕ್ಕೆ ಸಹಕಾರಿ ಎನಿಸಿದವು.